Friday 8 March 2024

ಬದುಕಿನ ಹಾದಿ - 10

ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಸೋಲಿನ ಮೇಲೆ ಸೋಲು ಎದುರಾಗುತ್ತಿದ್ದರೂ ಧೈರ್ಯಗೆಡಬೇಡಿ, ಪರಿಸ್ಥಿತಿಗಳಿಗೆ ತಲೆಬಾಗದೆ ಕಾರ್ಯ ನಿರ್ವಹಿಸುತ್ತಿರಿ, ಸಂಕಲ್ಪವನ್ನೆಂದಿಗೂ ಕೈಬಿಡಬೇಡಿ.

ಅಮ್ಮನ ಆದೇಶಕ್ಕೆ ಓಗೊಟ್ಟು, ಹೆಂಡತಿಯ ಅಪೇಕ್ಷೆಗೆ ಅನುಗುಣವಾಗಿ, ಮಹಾರಾಷ್ಟ್ರ ಸರ್ಕಾರದ ನೌಕರಿ ತೊರೆದು ನಾನು ಕರ್ನಾಟಕಕ್ಕೆ ಹಿಂದಿರುಗಿದಾಗ ಖಾಸಗಿ ಕ್ಷೇತ್ರದಲ್ಲೂ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆಯುಳ್ಳವರಿಗೆ ಬೇಡಿಕೆ ಇರಲಿಲ್ಲ. ಅಪ್ಲೈ ಮಾಡಿದ್ದೂ ಮಾಡಿದ್ದೇ, ರಿಪ್ಲೈ ಬಾರದ್ದೂ ಬಾರದ್ದೇ ಎಂಬ ಏಕತಾನತೆ ಮೂರು ತಿಂಗಳ ಕಾಲ ನನ್ನನ್ನು ನಿರಾಶೆಯ ಹೊಂಡಕ್ಕೆ ದೂಡಿತ್ತು.

ಅನಂತರ ಆರ್ಕಿಟೆಕ್ಟ್ 'ವೆಂಕಟರಮಣನ್ ಅಸೋಸಿಯೇಟ್ಸ್' ವತಿಯಿಂದ ಸಂದರ್ಶನಕ್ಕೆ ಕರೆ ಬಂತು. ಹೋದಾಗ 'ಆರು ತಿಂಗಳ ಅವಧಿಯ ಹುದ್ದೆಯೊಂದಿದೆ, ನಿರ್ವಹಿಸ್ತೀರಾ' ಎಂದು ಕೇಳಲಾಯಿತು. ನನ್ನ ಒಪ್ಪಿಗೆಯ ನಂತರ ಕಚೇರಿ ಟಿಪ್ಪಣಿಯೊಂದನ್ನು ಹಸ್ತಾಂತರಿಸಿ 'ಫಾದರ್ ಡಾಮಿನಿಕ್' ಅವರನ್ನು ನೇರವಾಗಿ ಸಂಪರ್ಕಿಸುವಂತೆ ಸಲಹೆ ನೀಡಲಾಯಿತು. ಆ ಮೇರೆಗೆ 'ಇಂಡಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್' ಎಂಬಲ್ಲಿಗೆ ತೆರಳಿದಾಗ, 'ಅವರು ಸನ್ಯಾಸಿನಿಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ, ಅವರಿಗೋಸ್ಕರ ನೀವು ಒಂದೆರಡು ಗಂಟೆ ಕಾಲ ಕಾಯಲು ಸಿದ್ದರಿದ್ದರೆ ಒಳ್ಳೆಯದೇ. ಇಲ್ಲವಾದರೆ ಹೋಗಬಹುದು ಎಂದು ಸೂಚಿಸಲಾಯಿತು.

ನನಗೆ ಕೆಲಸ ಬೇಕಿತ್ತು. ಆ ನಿಮಿತ್ತ ಎಷ್ಟೇ ಹೊತ್ತಾದರೂ ಕಾಯುತ್ತ ಅಲ್ಲಿರಲು ನಾನು ಸಿದ್ಧನಾದೆ. ಮಟಮಟ ಮಧ್ಯಾಹ್ನ 12 ಗಂಟೆಗೆ ಅಲ್ಲಿಗೆ ಹೋದ ನಾನು ಫಾದರ್ ಡಾಮಿನಿಕ್ ಅವರೊಂದಿಗೆ ಮೌನವಾಗಿ ಮುಖಾಮುಖಿಯಾದದ್ದು ಇರುಳು ಪರಿಸರವನ್ನು ವ್ಯಾಪಿಸಿದ ನಂತರವೇ. ವೆಂಕಟರಮಣನ್ ರವಾನಿಸಿದ ಕಚೇರಿ ಟಿಪ್ಪಣಿಯನ್ನು ಓದಿದ ಅವರು, ನನ್ನ ಅವತಾರವಾದರೂ ಹೇಗಿದೆ ಎಂದು ತಿಳಿದುಕೊಳ್ಳಲು ಯತ್ನಿಸದೆ, 'ನಾಳೆಯಿಂದ ಈತ ಕೆಲಸಕ್ಕೆ ಬರಲಿ' ಎಂದು ಆ ಟಿಪ್ಪಣಿಯ ಮೇಲೆ ಬರೆದು ಕ್ಷಣಾರ್ಧದಲ್ಲಿ ಹಿಂದಿರುಗಿದರು! 'ಈ ಸಂಪತ್ತಿಗೆ ನಾನು ಎಂಟು ಗಂಟೆ ಕಾಲ ಕಾಯುತ್ತ ಇಲ್ಲಿರಬೇಕಿತ್ತೆ' ಎಂಬೋಣವು ಮನದಲ್ಲಿ ಸುಳಿಯಿತಾದರೂ, ಶಬ್ದವನ್ನು ಹೊರಬೀಳಲು ಬಿಡದೆ, 'ನನ್ನ ಕೆಲಸವಾಯಿತಲ್ಲ' ಎಂದು ಸಮಾಧಾನ ತಂದುಕೊಳ್ಳುತ್ತ ನಾನು ಅಲ್ಲಿಂದ ಕದಲಿದೆ.

ಆರಂಭದಲ್ಲಿ ಆರ್ಕಿಟೆಕ್ಟ್ ಸೂಚಿಸಿದ ಮೇರೆಗೆ ಸರಿಯಾಗಿ ಆರು ತಿಂಗಳಿಗೆ ಅಲ್ಲಿನ ಕೆಲಸ ಪೂರ್ಣಗೊಂಡು, ನಂತರ ನಾನು ನಿರುದ್ಯೋಗಿಯಾದೆ. ಆ ಆರೂ ತಿಂಗಳು ನಾನು ಸಲ್ಲಿಸಿದ ದೈನಿಕ ವರದಿಯ ಬಗ್ಗೆ ಪದೇಪದೇ ವೆಂಕಟರಮಣನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನೆನಪು ಮಾಡಿಕೊಳ್ಳುತ್ತಾ, ಅವರೇ ನನ್ನ ಮುಂದಿನ ಉದ್ಯೋಗಕ್ಕೆ ಹಾದಿ ತೋರಿಯಾರೆಂದು ಭ್ರಮಿಸುತ್ತ ಅವರ ಕಚೇರಿಗೆ ನಾನು ಎಡತಾಕಿದ್ದು ವ್ಯರ್ಥವಾಯಿತು. ಅವರನ್ನು ಬೆಂಗಳೂರು ಗಾಲ್ಫ್ ಕ್ಲಬ್ಬಿನ ಅಧ್ಯಕ್ಷ ಪದವಿಯು ಅರಸುತ್ತ ಬಂದ ನಿಮಿತ್ತ ಅವರು ಬೆಂಗಳೂರು ಫುಟ್ಬಾಲ್ ಗ್ರೌಂಡ್ ಸಮೀಪದಲ್ಲಿರುವ ತಮ್ಮ ಅಧಿಕೃತ ಕಚೇರಿಯನ್ನು  ಸುಪುತ್ರ ಆರ್ಕಿಟೆಕ್ಟ್ ನರೇಶ್ ವಹಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಏರ್ಪಡಿಸಿ ನಿರ್ಗಮಿಸಿದ್ದರು. ನರೇಶ್ ನನ್ನೊಂದಿಗೆ ಸಂಭಾಷಿಸಿ, 'ಅಗತ್ಯ ಏರ್ಪಟ್ಟಾಗ ಫೀಲ್ಡ್ ವರ್ಕಿಗೆ ಕರೆಯುತ್ತೇನೆ' ಎಂಬ ಆಶ್ವಾಸನೆ ನೀಡಿದರು. ಅವರ ಕಚೇರಿಯಲ್ಲಿ ಟೇಬಲ್ ವರ್ಕ್ ಕೇವಲ ಹೆಣ್ಣುಮಕ್ಕಳಿಗೆ ಮೀಸಲಾಗಿದ್ದ ನಿಮಿತ್ತ ನಾನು ನಿಷ್ಣಾತನಾಗಿದ್ದರೂ ಅ ಕೆಲಸವನ್ನು ಅವರು ನನಗೆ ವಹಿಸುವಂತಿರಲಿಲ್ಲ. ತತ್ಪರಿಣಾಮ, ಮತ್ತೆ ಮೊದಲಿಟ್ಟಿತು ನನ್ನ 'ಅಪ್ಲೈ ಅಪ್ಲೈ ಬಟ್ ನೋ ರಿಪ್ಲೈ' ದಿನಚರಿ!

ಆ ಮೇರೆಗೆ ಒಂದೆರಡು ತಿಂಗಳ ಸಮಯ ವ್ಯರ್ಥವಾದ ನಂತರ 'ವರದಿಗಾರರು ಬೇಕಾಗಿದ್ದಾರೆ, ನೇರವಾಗಿ ಭೇಟಿಯಾಗತಕ್ಕದ್ದು' ಎಂಬ 'ಸದರ್ನ್ ಹೆರಾಲ್ಡ್' ಪತ್ರಿಕೆಯ ಜಾಹಿರಾತು ನನ್ನನ್ನು ಆಕರ್ಷಿಸಿತು. ಆ ಜಾಹಿರಾತು, 'ನಿರುದ್ಯೋಗದ ಅವಧಿಯನ್ನು ಕುಗ್ಗಿಸಲು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರವನ್ನಷ್ಟೇ ನೆಚ್ಚಿಕೊಳ್ಳದೆ ಆಗೀಗ ಪತ್ರಿಕೆಗಳನ್ನೂ ಎಡತಾಕುವುದು ಲೇಸು' ಎಂದು ನನ್ನನ್ನು ಪ್ರೇರಿಸುತ್ತಿತ್ತು. ಪೀಣ್ಯದಲ್ಲಿದ್ದ ಆ ಪತ್ರಿಕೆಯ ಕಾರ್ಯಾಲಯದಲ್ಲಿ ಸಿ ಟಿ ಜೋಷಿಯವರ ನೇತೃತ್ವದಲ್ಲಿ ಸಂದರ್ಶನ ನಡೆಯುತ್ತಿತ್ತು. ಆಗ್ಗೆ ಪ್ರಕಟವಾಗಿದ್ದ ನನ್ನ 'ಮರುಭೂಮಿ' ಕಾದಂಬರಿಯ ಪ್ರತಿ, ಉದಯವಾಣಿ ಪತ್ರಿಕೆಯು ಪ್ರಕಟಿಸಿದ್ದ ನನ್ನ ವಾರದ ಕತೆಗಳ ಬಂಚ್ ಹಾಗೂ ಮುಂಬೈಯಲ್ಲಿ ಪ್ರಕಟವಾಗಿದ್ದ ಅಂಕಣ 'ರಂಗನ ದಿನಚರಿ' ಕ್ಲಿಪಿಂಗ್ಸನ್ನು ಅವರ ಮುಂದಿಟ್ಟೆ. ಅವುಗಳತ್ತ ಒಂದು ಕ್ಷಣ ಕಣ್ಣಾಡಿಸಿದ ಅವರು 'ಒಂದು A4 ಸೈಜಿನ ಹಾಳೆಯಲ್ಲಿ ನೀವು ಇದುವರೆಗೆ ನಡೆದು ಬಂದ ದಾರಿ ಕುರಿತು ಬರೆಯಿರಿ, ಆನಂತರ ನೋಡೋಣ' ಎಂದರು.

ಆ ಪರೀಕ್ಷೆಯಲ್ಲಿ ನಾನು ಗೆದ್ದು, 'ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಇಲ್ಲದಿದ್ದಾಗ ಜೀವನಪಾಯಕ್ಕಾಗಿ ಆಗಿಂದಾಗ್ಗೆ ಪತ್ರಿಕೋದ್ಯಮವನ್ನೂ ನಾನು ಆಶ್ರಯಿಸಬಹುದು' ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಂಡೆ.

Wednesday 6 March 2024

ಬದುಕಿನ ಹಾದಿ - 9

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಈ ಜೀವನದಲ್ಲಿ ತಾಯಿಯ ಪ್ರೀತಿಯೇ ಶ್ರೇಷ್ಠ, ಅವಳೇ ದೇವಾಲಯ, ಅವಳೇ ಪೂಜೆ ಮತ್ತು ಅವಳೇ ಸಮಸ್ತ ಜಗತ್ತು.

ವಿದ್ಯಾರ್ಥಿಗಳ ಕಾಲುಕಾಲಿನ ಮೇಲೆ ಹೊಡೆದು ಅವರ ಅಂಗಸಾಧನೆ ಮಟ್ಟವನ್ನು ಸುಧಾರಿಸುವ ಪ್ರಯತ್ನದಲ್ಲಿ NCC ತರಬೇತುದಾರರು ಹಾಗೂ ಡ್ರಿಲ್ ಮಾಸ್ಟರ್ ಸದಾ ಇರುವರೆಂಬ ಕುಖ್ಯಾತಿಯನ್ನು ಶಾಲಾಕಾಲೇಜುಗಳು ಹೊತ್ತಿದ್ದ ದಿನಗಳವು. 'ನಾನು ಅಂಥವನಲ್ಲವೇ ಅಲ್ಲ' ಎಂದು ವಾದಿಸಿದರು ನನ್ನ ತಂಗಿಯನ್ನು ಮದುವೆಯಾಗಲಿದ್ದ ವರ, ಡ್ರಿಲ್ ಮಾಸ್ಟರ್ ಶ್ರೀನಿವಾಸರಂಗಯ್ಯಂಗಾರ್.

ಆ ಸಂದರ್ಭದಲ್ಲಿ ನಮ್ಮಮ್ಮನ ಗಮನವಿದ್ದುದು ತಮ್ಮ ಗೃಹಕಾರ್ಯ, ಕಿಮೀಗಟ್ಟಲೆ ನಡೆದಾಟ ಹಾಗೂ ಶಾಲಾಕರ್ತವ್ಯಗಳ ಮೇಲೆ. ನನ್ನ ಮತ್ತು ನನ್ನ ತಂಗಿಯ ಲಕ್ಷ್ಯ ಕೇಂದ್ರೀಕೃತವಾಗಿದ್ದುದು ನಮ್ಮನಮ್ಮ ಉದ್ಯೋಗಗಳ ಮೇಲೆ. ಆ ಹಿನ್ನೆಲೆಯಲ್ಲಿ ಜವಾಬ್ದಾರಿ ವಹಿಸಿಕೊಂಡು, ಅಮ್ಮನ ಸಂಬಳ ಬಂದ ತಕ್ಷಣ ನಿಯಮಿತ ವೆಚ್ಚಗಳನ್ನು ನನ್ನ ತಮ್ಮ ನಿಭಾಯಿಸುತ್ತಿದ್ದ. ವಿದ್ಯಾರ್ಥಿಯಾಗಿರಬೇಕಾದ ಸಮಯದಲ್ಲಿ ಹಣಕಾಸು ಉಸ್ತುವಾರಿಯ ಹೊರೆ ಹೆಗಲೇರಿದ್ದರಿಂದ ಅವನು ಮೆಟ್ರಿಕ್ ನಪಾಸಾದ ನಂತರ ಮುಂದಕ್ಕೆ ಓದಲಾಗಲಿಲ್ಲ.

ಓದು ಮುಂದುವರಿಸಲಾರದವರು ಪ್ರಪಂಚ ಜ್ಞಾನದಲ್ಲಿ ಓದಿದವರಿಗಿಂತ ಮಿಗಿಲು. ಅಂಥ ಒಂದು ಪ್ರತಿಭೆಯಾಗಿ ನನ್ನ ತಮ್ಮ ಅಭಿವೃದ್ಧಿಗೊಳ್ಳುತ್ತಿರುವನೆಂದು ನಾವು ನಂಬಿದ್ದ ಕಾಲದಲ್ಲಿ ನಾನು ಮದುವೆಯಾದೆ. ಮಹಾರಾಷ್ಟ್ರ ಸರ್ಕಾರದ ಒಂದು ತಾತ್ಕಾಲಿಕ ಹುದ್ದೆಯನ್ನು ನಾನಾಗ ನಿರ್ವಹಿಸುತ್ತಿದ್ದೆ. ಮದುವೆಯಾದ ಒಂದೆರಡು ತಿಂಗಳೊಳಗೇ ಮಹಾರಾಷ್ಟ್ರದ ಜೀವನಶೈಲಿ ರುಚಿಸದ ನನ್ನ ಪತ್ನಿ ಕರ್ನಾಟಕಕ್ಕೆ ಹಿಂದಿರುಗಿದಳು. ಅನಂತರ ಅವಳು ನನ್ನ ತಮ್ಮನಿಗಿದ್ದ ಒಂದು ದುಶ್ಚಟವನ್ನು ಕಂಡುಹಿಡಿದು ತಿಳಿಸಿದಾಗ ನಮ್ಮಮ್ಮ ಕ್ಷಣಕಾಲ ಚಿಂತಿತರಾದರೂ,  ಅವನು ನಿರ್ವಹಿಸುತ್ತಿದ್ದ ಮನೆಯ ಹಣಕಾಸು ವ್ಯವಹಾರದಲ್ಲಿ ಯಾವುದೇ ಕೊರತೆ ಇಲ್ಲದ್ದನ್ನು ನೆನೆದು ಆ ವ್ಯಥೆಯನ್ನು ತ್ಯಜಿಸಿದರು.

ನಾನು ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಸೇರಿದ ಒಂದೆರಡು ತಿಂಗಳ ನಂತರ ಅಲ್ಲಿನ ಆಪ್ತ ತಾಂತ್ರಿಕ ಸಹಾಯಕ ಇಂಜಿನಿಯರ್ ನಿವೃತ್ತಿ ಹೊಂದಿದರು. ಆ ಸ್ಥಾನವನ್ನು ನಾನು ನಿರ್ವಹಿಸುವಂತೆ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದಾಗ ನಾನು ಆಶ್ಚರ್ಯಚಕಿತನಾದೆ. ಮರಾಠಿ ಭಾಷೆಗೆ ನಾನು ಹೊಂದಿಕೊಳ್ಳುವುದು ಸ್ವಲ್ಪ ನಿಧಾನವೇ ಆಗಿದ್ದರೂ ಆಂಗ್ಲ ಭಾಷೆಯ ಮೇಲೆ ನಾನು ಹೊಂದಿದ್ದ ಹಿಡಿತವನ್ನು ಗಮನಿಸಿ ಆ ಆದೇಶವನ್ನು ನನಗೆ ನೀಡಲಾಗಿತ್ತು. ಬೃಹತ್ ನೀರಾವರಿ ಯೋಜನೆಗಳ ಅನ್ವೇಷಣೆ ಜವಾಬ್ದಾರಿಗೆ ಬದ್ಧರಾಗಿದ್ದ ಆ ಚಾಣಾಕ್ಷ ಎಕ್ಸಿಕ್ಯೂಟಿವ್ ಇಂಜಿನಿಯರ್ ವಾರ್ಷಿಕ ವರದಿಯಲ್ಲಿ ನನ್ನ ಸಹಾಯಕ ವೃತ್ತಿ ಉತ್ತಮವೆಂದು ದಾಖಲಿಸಿದ ನಿಮಿತ್ತ, ಕ್ಲಿಷ್ಟಕರವಾದ ಕರ್ತವ್ಯಗಳಿಗೆ ಹೆಸರುವಾಸಿಯಾದ ಆ ನನ್ನ ಹುದ್ದೆ ಖಾಯಂ ಆಯಿತು. ಆಗ್ಗೆ ನಾವು ವರದಿ ಸಲ್ಲಿಸಿದ 'ಮೋರ್ಬಾ' ಜಲಾಶಯದ ನಿರ್ಮಾಣ ಪೂರ್ಣಗೊಂಡು, ಅದೀಗ ಬೃಹತ್ ಮುಂಬಯಿಯ ಕುಡಿಯುವ ನೀರು ಸರಬರಾಜಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದೇ ರೀತಿ, ನಾವು ಅನ್ವೇಷಿಸಿದ 'ಹೆಟವಣೆ' ಜಲಾಶಯದ ನೀರು ಮುಂಬಯಿ ಮತ್ತು ಪೂನಾ ನಡುವೆ ಅಗಾಧವಾಗಿ ಹರಡಿರುವ ಕೃಷಿ ಕ್ಷೇತ್ರದ ಅಗತ್ಯಗಳನ್ನು ಅತ್ಯುತ್ತಮವಾಗಿ ಪೂರೈಸುತ್ತಿದೆ.

ಆ ಇಲಾಖೆಯಲ್ಲಿ ನನ್ನ ನಾಲ್ಕು ವರ್ಷಗಳ ಸೇವೆಯ ನಂತರವೂ ನನ್ನ ಪತ್ನಿ ಹಿಂದಿರುಗಲಿಲ್ಲ. ಮಹಾರಾಷ್ಟ್ರದಲ್ಲಿ ನೆಲೆಸುವುದು ಅವಳಿಗೆ ಸುತರಾಂ ಇಷ್ಟವಿರಲಿಲ್ಲ. 'ಅವಳಿಗೆ ಇಷ್ಟವಿಲ್ಲದಿದ್ದರೆ ನಿನ್ನದಾದರೂ ಏನು ಹಠ, ಕರ್ನಾಟಕಕ್ಕೆ ಹಿಂದಿರುಗಿ ಯಾವುದಾದರೂ ಕೆಲಸ ಹುಡುಕಿಕೊ' ಎಂದು ನಮ್ಮಮ್ಮ ಸೂಚಿಸಿದಾಗ ಆ ಕುರಿತು ನಾನು ತೀವ್ರವಾಗಿ ಆಲೋಚಿಸತೊಡಗಿದೆ. ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ಖಾಸಗಿ ಹುದ್ದೆಗಳಲ್ಲಿ ಆಶ್ವಾಸನೆ ಶೂನ್ಯ. ಅವುಗಳನ್ನು ಅರಿಸಿಕೊಂಡರೆ ಕೆಲಸದಿಂದ ಕೆಲಸಕ್ಕೆ ಹಾರುತ್ತ, ಮಧ್ಯೆಮಧ್ಯೆ ನಿರುದ್ಯೋಗದ ಸಂಕಷ್ಟವನ್ನೂ ಅನುಭವಿಸುತ್ತಿರಬೇಕಾಗುತ್ತದೆ (ಇದನ್ನು ಕುರಿತು ನಾನು ಬರೆದ ಅಂತರ್ಜಾಲ ಅಂಚೆಯ ಲಿಂಕ್: https://www.speakingtree.in/allslides/ups-and-downs-of-a-civil-engineer). 




Sunday 3 March 2024

ಬದುಕಿನ ಹಾದಿ - 8

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/

ಮೇಲ್ಕಂಡ ಉಕ್ತಿಯ ಭಾವಾರ್ಥ: ಜೀವನದಲ್ಲಿ ಯಾರನ್ನೂ ದೂಷಿಸಬೇಡಿ, ಏಕೆಂದರೆ ಒಳ್ಳೆಯವರಿಂದ ಸಂತೋಷವನ್ನೂ, ಕೆಟ್ಟವರಿಂದ ಬದುಕಿನ ಅನುಭವವನ್ನೂ ನೀವು ಸಂಪಾದಿಸುವುದು ನಿಶ್ಚಿತ.

ವಿದ್ಯಾರ್ಥಿ ದೆಸೆಯ ನಂತರ ನಾನು ಉದ್ಯೋಗದ ಬೇಟೆ ಆರಂಭಿಸಿದ್ದ ದಿನಗಳವು. ದೂರದ ರಾಮೇಶ್ವರಕ್ಕೆ ತೆರಳಿ, ರಾಮನಾಥಪುರಂ ಟ್ರಸ್ಟ್ ಎಂಬ ಧಾರ್ಮಿಕ ಕೇಂದ್ರದಲ್ಲಿ ಸಂದರ್ಶನಕ್ಕೆ ಹಾಜರಾಗಿ ತಿರುವಾಡಾನೈ ಎಂಬಲ್ಲಿ ಸಿವಿಲ್ ಇಂಜಿನಿಯರ್ ಹುದ್ದೆ ನಿರ್ವಹಿಸಲು ನಾನು ಆಯ್ಕೆಯಾದೆ (ಅಲ್ಲಿನ ಅನುಭವ ಕುರಿತು ನಾನು ಬರೆದ ಅಂತರ್ಜಾಲ ಅಂಚೆಯ ಲಿಂಕ್: https://allinmycircle.blogspot.com/2019/05/memories-never-die.html).

ಅಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಒಮ್ಮೆ ನಮ್ಮಮ್ಮ ಮತ್ತು ಅವರ ಸ್ನೇಹಿತೆ ಅಚ್ಚಮ್ಮ ತೀರ್ಥಯಾತ್ರೆ ಸಲುವಾಗಿ ಬಂದರು. ಆ ಸಂದರ್ಭದಲ್ಲಿ ತ್ರಿವಿಕ್ರಮ ಅಯ್ಯರ್ ಎಂಬ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಆಗಮಿಸಿ ನಮ್ಮಮ್ಮನನ್ನು ಭೇಟಿಯಾದ. ತೀರ್ಥಯಾತ್ರೆಗೆ ಆಗಮಿಸಿದ ಆತ ಆ ಊರಿನಲ್ಲಿ ಯಾರನ್ನೋ ನೋಡಬೇಕಿತ್ತಂತೆ. ನೋಡಲು ಸಾಧ್ಯವಾಗದೆ ಮನೆಯ ಬೀಗಮುದ್ರೆ ಕಂಡು ಕಂಗಾಲಾಗಿ ನಮ್ಮಲ್ಲಿಗೆ ಬಂದನಂತೆ. ನಮ್ಮ ಮನೆಯ ಜಗಲಿಯ ಮೇಲೆ ಒಂದೆರಡು ದಿನ ಉಳಿದು ನೋಡಬೇಕಾದವರನ್ನು ನೋಡಿಯೇ ಹಿಂದಿರುಗಲು ನಿರ್ಧರಿಸಿದನಂತೆ. ಯಾತ್ರಾರ್ಥಿಗಳಿಗೆ ಅಂಥ ಸನ್ನಿವೇಶಗಳು ಸಹಜವಾದ್ದರಿಂದ, ಆ ಕುಟುಂಬದ ಗಲಿಬಿಲಿಯನ್ನು ನಿವಾರಿಸುವುದು ಅತ್ಯಗತ್ಯವಾದ ನಿಮಿತ್ತ, ಆತನ ಕೋರಿಕೆಯನ್ನು ನಮ್ಮಮ್ಮ ಮನ್ನಿಸಿದರಂತೆ.

ಅಂದು ಅಚ್ಚಮ್ಮ ತಯಾರಿಸುವೆನೆಂದಿದ್ದ, ನಮ್ಮ ಕುಟುಂಬಕ್ಕೆ ಅಪರೂಪವಾದ ಖಾದ್ಯ ರಾಗಿಮುದ್ದೆಯೊಂದಿಗೆ ನಮ್ಮಮ್ಮ ನನ್ನ ಆಗಮನವನ್ನು ನಿರೀಕ್ಷಿಸುತ್ತಿದ್ದರು. ನಾನು ಮನೆ ಪ್ರವೇಶಿಸುವ ಮುನ್ನ ಸುಸಂಸ್ಕೃತರೆಂದು ತೋರುತ್ತಿದ್ದ ಅಪರಿಚಿತರನ್ನು ಜಗಲಿಯ ಮೇಲೆ ಕಂಡು ಚಕಿತನಾದೆ. ಆ ಮೂವರ ಪೈಕಿ ಮಹಿಳೆ ಸ್ವಂತ ಕಾರ್ಯದಲ್ಲಿ ಮಗ್ನರಾಗಿರುವಲ್ಲಿ, ಪುರುಷ ಹಾಗೂ ಬಾಲಕಿ ದಿಟ್ಟಿಸಿ ನೋಡುತ್ತ ನನ್ನ ಬರವನ್ನು ಗಮನಿಸುತ್ತಿದ್ದರು. ಮನದಿಂಗಿತವನ್ನು ನಿಯಂತ್ರಿಸಿಕೊಳ್ಳುತ್ತ ಮಾತನಾಡದೆ ಮನೆಯೊಳಕ್ಕೆ ನಾನು ಬಂದ ತಕ್ಷಣ ಅಮ್ಮ, ಆಹ್ವಾನ ಇಲ್ಲದೆ ಆಗಮಿಸಿದ ಆ ಅತಿಥಿಗಳು ಎದುರಿಸುತ್ತಿದ್ದ ಪರಿಸ್ಥಿತಿಯನ್ನೂ, ಆ ಕುರಿತು ತಾನು ಕೈಗೊಂಡ ತೀರ್ಮಾನವನ್ನೂ ವಿವರಿಸಿದರು. ಅಮ್ಮ ನನ್ನೊಂದಿಗೆ ಮಾತನಾಡುತ್ತಿರುವಾಗ ಅಡುಗೆ ಮನೆಯಿಂದ ಖಾದ್ಯದ ಪಾತ್ರೆಗಳೊಂದಿಗೆ ಬಂದ ಅಚ್ಚಮ್ಮ 'ಅತಿಥಿಗಳಿಗೆ ಬಡಿಸಿಬಿಡುತ್ತೇನೆ' ಎಂದು ಸಂಜ್ಞೆಯ ಮೂಲಕ ಸೂಚಿಸುತ್ತ ಜಗಲಿಯತ್ತ ಸಾಗಿದರು.

ಕೆಲವೇ ನಿಮಿಷಗಳಲ್ಲಿ ಜಗಲಿಯೆಡೆಯಿಂದ ಕೇಕೆ ಹಾಕಿ ನಗುವ ಸದ್ದು ಕೇಳಿಸಿತು. ನಾನು, ಅಮ್ಮ ಮನೆಯೊಳಗಿಂದ ಹೊರಕ್ಕೆ ಧಾವಿಸಿದೆವು. ನಮ್ಮನ್ನು ನೋಡಿದ ಬಳಿಕ ತ್ರಿವಿಕ್ರಮ ಅಯ್ಯರ್ ಅಚ್ಚಮ್ಮನವರತ್ತ ಬೆರಳು ತೋರಿ 'ಗಾಜುಗಳಿ ಅಚ್ಚಮ್ಮ' ಎಂದು ಕೂಗುತ್ತ ತನ್ನ ನಗೆಯ ಅಬ್ಬರವನ್ನು ಮತ್ತೂ ಹೆಚ್ಚಿಸಿದ. ತಬ್ಬಿಬ್ಬಾದ ಅಚ್ಚಮ್ಮ ತಮ್ಮ ಕೈಲಿದ್ದ ರಾಗಿಮುದ್ದೆಯ ಪಾತ್ರೆಯನ್ನು ನಮ್ಮ ಮುಂದೆ ಹಿಡಿದರು. ಅದರಲ್ಲಿ ಮುದ್ದೆ ಎಂದಿನ ಚೆಂಡಿನ ಆಕಾರದಲ್ಲಿರದೆ ಗಾಜಿನ ಹಳಿಯ ರೂಪದಲ್ಲಿ ಹರಡಿಕೊಂಡಿತ್ತು. ಮುದ್ದೆಯನ್ನು ಉಂಡೆ ಕಟ್ಟದೆ ಹಾಗೇ ಸೌಟಿನಿಂದೆತ್ತಿ ಬಡಿಸುವ ಉದ್ದೇಶ ಅಚ್ಚಮ್ಮನವರಿಗಿದ್ದಿರಬೇಕು, ಅದು ಅತಿಥಿಗೆ ವಿಚಿತ್ರವಾಗಿ ಕಂಡು ಆ ಉದ್ಗಾರ ಆತನ ಬಾಯಿಂದ ಹೊರಬೀಳಲು ಕಾರಣವಾಗಿರಬೇಕು. ಆತ ತಮಿಳಿನಲ್ಲಿ 'ಗಾಜು' ಎಂಬ ಪೂರ್ವ ಪದವನ್ನೂ, 'ಕಳಿ' ಎಂಬ ಉತ್ತರ ಪದವನ್ನೂ ಬಳಸಿ ಅದರ ಆದೇಶ ರೂಪವಾದ 'ಗಾಜುಗಳಿ' ಎಂಬ ಉದ್ಗಾರ ಹೊರಡಿಸಿದ್ದ. ಮುದ್ದೆಯನ್ನು ತಮಿಳಿನಲ್ಲಿ 'ಕಳಿ' ಎನ್ನುತ್ತಾರೆ.

ಒಂದೆರಡು ಗಂಟೆಗಳಷ್ಟು ಸಮಯ ಉರುಳುವುದರೊಳಗೆ ತ್ರಿವಿಕ್ರಮ ಅಯ್ಯರ್ ಸಂಸಾರ ನಮ್ಮಮ್ಮ ಹಾಗೂ ಅಚ್ಚಮ್ಮನವರಿಗೆ ಅತ್ಯಂತ ಹತ್ತಿರವಾಗಿಬಿಟ್ಟಿತ್ತು. 'ಕಳೆದ ಹತ್ತು ವರ್ಷಗಳಲ್ಲಿ ಮನೆಯಲ್ಲಿ ತಾನು ಒಮ್ಮೆಯೂ ಹೆಂಗಸರಿಗೆ ಅಡುಗೆ ಮಾಡಲು ಬಿಟ್ಟಿಲ್ಲ. ತನ್ನ ಅಡುಗೆ ಕೈಚಳಕವೇ ಅಂಥದ್ದು. ಅದರ ರುಚಿ ನೋಡಲು ದಿನವೂ ಮನೆ ಮುಂದೆ ಪರಿಚಿತರು ಕ್ಯೂ ನಿಲ್ಲುತ್ತಿದ್ದರು' ಎಂದು ಪತ್ನಿ, ಪುತ್ರಿಯ ಕಡೆ ನೋಡುತ್ತಾ ತ್ರಿವಿಕ್ರಮ ಅಯ್ಯರ್ ಸ್ವಪ್ರತಿಷ್ಠೆ ಮೆರೆದನಂತೆ!

ಅಚ್ಚಮ್ಮ ಕುತೂಹಲ ಹತ್ತಿಕ್ಕಲಾರದೆ, 'ಅವಕಾಶ ನೀಡಿದರೆ ಈ ಮನೆಯಲ್ಲೂ ಅಡುಗೆಗೆ ತಾವು ಸಿದ್ಧರೇನೋ' ಎಂದುಬಿಟ್ಟರಂತೆ. ಆ ಸಂದರ್ಭದಲ್ಲಿ ಜೀವನ ಪೂರ್ತಿ ಅಡುಗೆ ಮಾಡಿ ಹಣ್ಣಾದ ಭಾವ ನಮ್ಮಮ್ಮನ ಮುಖದಿಂದಲೂ ಇಣುಕುತ್ತಿದ್ದಿತ್ತಂತೆ. ಅಚ್ಚಮ್ಮನವರ ಆ ಮಾತಿಗೇ ಕಾಯುತ್ತಿದ್ದನೇನೋ ಎಂಬಂತೆ ಠಣ್ಣನೆ ಜಗಲಿಯಿಂದ ಮನೆಯೊಳಕ್ಕೆ ಜಿಗಿದ ತ್ರಿವಿಕ್ರಮ ಅಯ್ಯರ್, 'ಮೈತ್ರೀ ಅದು ಕೊಂಡುವಾಡೀ, ಇದು ಕೊಂಡುವಾಡೀ (ಮೈತ್ರೀ ಅದನ್ನು ತೊಗೊಂಡು ಬಾರೇ, ಇದನ್ನು ತೊಗೊಂಡು ಬಾರೇ)' ಎಂದು ಮಗಳಿಗೆ ಆರ್ಡರ್ ಮಾಡುತ್ತ ಆಶ್ಚರ್ಯಕರವಾದ ರೀತಿಯಲ್ಲಿ ಅಡುಗೆಮನೆ ಉಸ್ತುವಾರಿಗೆ ಸನ್ನದ್ಧನಾಗಿ ನಿಂತುಬಿಟ್ಟನಂತೆ!!!

ರಾತ್ರಿ ಕಾರ್ಯಕ್ಷೇತ್ರದಿಂದ ಹಿಂದಿರುಗಿದ ಬಳಿಕ ವಿಶೇಷ ಭಕ್ಷ್ಯಗಳ ಸ್ವಾಗತ ದೊರೆತ ನಿಮಿತ್ತ, ಜಗಲಿಯಿಂದ ಎದ್ದುಬಂದು ಮನೆಯೊಳಗೇ ಸೆಟ್ಲ್ ಆಗಿಬಿಟ್ಟ ಅಪರಿಚಿತ ಅತಿಥಿಗಳನ್ನು ಟೀಕಿಸಲು ನಾನು ಮುಂದಾಗಲಿಲ್ಲ. ಹಾಗೇ ಎರಡು ದಿನ ಮುಂದುವರಿದ ನಂತರ ಆ ಅತಿಥಿಗಳು ಪ್ರತ್ಯೇಕವಾಗಿ ನಮ್ಮಮ್ಮನೊಂದಿಗೆ 'ಮೈತ್ರಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?' ಎಂದು ಪ್ರಶ್ನಿಸಿದರಂತೆ. ಅಲ್ಲೇ ಇದ್ದ ಅಚ್ಚಮ್ಮ ಒಡನೆಯೇ, 'ಅವಳಿಗೂ ನಿಮ್ಮ ಮಗನಿಗೂ ಒಳ್ಳೆಯ ಜೋಡಿಯಾಗುತ್ತದೆ' ಎಂದು ನಮ್ಮಮ್ಮನ ಬೆನ್ನು ತಟ್ಟಿದರಂತೆ!

ನಂತರ ನೇರವಾಗಿ ತ್ರಿವಿಕ್ರಮ ಅಯ್ಯರ್ 'ನನ್ನ ಮಗಳು ಮೈತ್ರಿಯನ್ನು ಕುರಿತು ನಿಮ್ಮಮ್ಮನ ಸಂಗಡ ಮಾತನಾಡಿದ್ದೇನೆ' ಎಂದು ಆರಂಭಿಸಿದ ಆತನ ಇಂಗಿತವನ್ನು ಅರ್ಥ ಮಾಡಿಕೊಂಡು ಸಂಭಾಷಣೆಯನ್ನು ಮುಂದುವರಿಯಲು ನಾನು ಬಿಡಲಿಲ್ಲ. 'ಈ ಟ್ರಸ್ಟಿನ ನನ್ನ ಉದ್ಯೋಗ ತಾತ್ಕಾಲಿಕ. ಅದನ್ನು ಪರಿಶಿಷ್ಟ ಜಾತಿಯ ಅಭ್ಯರ್ಥಿ ದೊರೆತ ತಕ್ಷಣ ಬಿಟ್ಟುಕೊಟ್ಟು ಹೊರಟರೆ ಭಾರತದಲ್ಲಿ ನಾನೆಲ್ಲಿ ನೆಲೆಸುತ್ತೇನೆಯೋ ಹೇಳಲಾರೆ. ತಮಿಳುನಾಡಿನಲ್ಲಿರುವ ಸಾಧ್ಯತೆ ತೀರಾ ಕಡಿಮೆ' ಎಂದು ನಾನು ಪ್ರತಿಕ್ರಿಯಿಸಿದಾಗ ಪ್ರಕಟವಾದ ಆತನ ಮುಖಭಾವ ಮಾಮೂಲಿ ತಮಿಳರಿಗಿಂತ ವಿಭಿನ್ನವಾಗಿಯೇನೂ ಇರಲಿಲ್ಲ. ಬಹುತೇಕ ತಮಿಳರು ಅನ್ಯ ಭಾಷಾ ಪ್ರಾಂತದ ಗಂಡುಗಳಿಗೆ ಹೆಣ್ಣು ಕೊಡುವುದಿಲ್ಲ. ಮರುದಿನ ಬೆಳಿಗ್ಗೆ ಆ ಸಂಸಾರ ನಮಗೆ ಟಾಟಾ ಹೇಳಿ ಹೊರಟುಹೋಯಿತು.

Thursday 29 February 2024

ಬದುಕಿನ ಹಾದಿ - 7

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಬೆಂಕಿಕಡ್ಡಿಯು ಇತರರನ್ನು ಬೆಳಗುವ ಮೊದಲು ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆ, ಸುಖ-ದುಃಖಗಳ ಜೊತೆ ಕಣ್ಣಾಮುಚ್ಚಾಲೆಯಾಡದ ಬದುಕಾದರೂ ಎಂಥದ್ದು?

ಹಾಸನ ಜಿಲ್ಲೆಯ ಬೇಲೂರು ರಸ್ತೆಯಲ್ಲಿದ್ದ ಕುಪ್ಪಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕಿಯಾಗಿ ನಮ್ಮಮ್ಮ ಕರ್ತವ್ಯವನ್ನು ನಿರ್ವಹಿಸಬೇಕಿತ್ತು. ಗ್ರಾಮಸ್ಥರು ಉಚಿತ ವಸತಿ ಒದಗಿಸಲು ಸಿದ್ಧರಾಗಿದ್ದರೂ ಅದನ್ನು ಒಪ್ಪಿಕೊಳ್ಳುವಂತಿರಲಿಲ್ಲ. ನನ್ನ ಮತ್ತು ನನ್ನ ತಂಗಿಯ ಪ್ರಾಥಮಿಕ ಶಿಕ್ಷಣ ಪೂರ್ಣಗೊಂಡಿದ್ದು, ನಮ್ಮ ಮುಂದಿನ ಓದು ಆರಂಭಿಸುವ ದೃಷ್ಟಿಯಿಂದ ನಾವು ಹಾಸನದಲ್ಲಿರಬೇಕಾದ ಅನಿವಾರ್ಯತೆಯಿತ್ತು. ಹಾಸನದಲ್ಲಿ ಸಾಂಸಾರಿಕ ವೆಚ್ಚ, ಮನೆ ಬಾಡಿಗೆ ಹಾಗೂ ಮಕ್ಕಳ ಶೈಕ್ಷಣಿಕ ಅಗತ್ಯ ಅಮ್ಮನಿಗೆ ಗಹನವಾದ ಆಲೋಚನೆಯ ವಿಷಯಗಳಾಗಿದ್ದವು.

ಹಾಸನ್ ಸಿಟಿಯ ಅರಳೇಪೇಟೆ ಬಡಾವಣೆಯಲ್ಲಿದ್ದ ಬಾಡಿಗೆ ಮನೆಯಿಂದ ಕುಪ್ಪಳ್ಳಿಯ ಸರ್ಕಾರಿ ಪ್ರಾಥಮಿಕ ಪಾಠಶಾಲೆ 10 ಕಿ. ಮೀ. ದೂರದಲ್ಲಿತ್ತು. ಆ ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸುತ್ತ ಹೋಗಿಬಂದು ಶಾಲಾಕರ್ತವ್ಯ ಪೂರೈಸಿ ಮನೆ ಖರ್ಚಿನ ತಕ್ಕಡಿ ತೂಗುವ ನಿರ್ಧಾರವನ್ನು ನಮ್ಮಮ್ಮ ತಳೆದರು. ಹಾಸನ ನೀರು ಸರಬರಾಜು ಇಲಾಖೆಯು ಸ್ಥಾಪಿಸಿದ ಕೊಳವೆಬಾವಿ ಅರ್ಧ ಕಿ. ಮೀ. ದೂರದಲ್ಲಿದ್ದು, ಅಲ್ಲಿಂದ ಬೆಳಗಿನ ಜಾವ 3 ಗಂಟೆಗೆ ನೀರು ಹಿಡಿದುಕೊಂಡು ಬಂದು ಮುಸುರೆ ತಿಕ್ಕಿ, ಸ್ನಾನ - ಅಡುಗೆ ಪೂರೈಸಿ, ಬಟ್ಟೆ ಒಗೆದು, ಮಕ್ಕಳೊಂದಿಗೆ ಉಪಹಾರ ಮುಗಿಸಿ, ಮಧ್ಯಾಹ್ನದ ಊಟಕ್ಕೆ ಲಂಚ್ ಬಾಕ್ಸ್ ತೆಗೆದುಕೊಂಡು ಡ್ಯೂಟಿ ಸಲುವಾಗಿ ಬೆಳಿಗ್ಗೆ 8 ಗಂಟೆಗೆ ಮನೆ ಬಿಡುವ ದಿನಚರಿಗೆ ಅಮ್ಮ ಹೊಂದಿಕೊಂಡರು. ಅವರೊಂದಿಗೆ ಪ್ರತಿದಿನ ಬೆಳಗಿನ ಜಾವ 3 ಗಂಟೆಗೆ ನೀರು ಹೊರುವ ಕಾಯಕಕ್ಕೆ ನಾನು ಮತ್ತು ನನ್ನ ತಂಗಿ ಸಹ ಸಜ್ಜಾದೆವು.

ಕುಪ್ಪಳ್ಳಿ ಶಾಲೆಯಲ್ಲಿ ಸಹೋಪಾಧ್ಯಾಯರಾಗಿದ್ದ ಶೇಷಾದ್ರಿ ಅಯ್ಯಂಗಾರ್ ಕುಟುಂಬದ ಸ್ಥಿತಿ ಸಹ ನಮ್ಮ ಕುಟುಂಬವನ್ನೇ ಹೋಲುತ್ತಿತ್ತು. ಕುಪ್ಪಳ್ಳಿ ಸಮೀಪದಲ್ಲಿದ್ದ ವುದ್ದೂರು ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಶಿಕ್ಷಕಿ ಫಿಲೋಮಿನ ಅವರ ಮನೆಯ ಪಾಡು ನಮಗಿಂತ ಭಿನ್ನವೇನೂ ಆಗಿರಲಿಲ್ಲ. ಇನ್ನು ಕೇಳುವುದೇನಿದೆ, ಗದ್ದೆಹಳ್ಳವನ್ನು ಹಾಯುತ್ತ 10 ಕಿ. ಮೀ. ಕಾಲ್ನಡೆಯುತ್ತಾ ದಿನವೂ ಶಾಲೆ ತಲುಪುವ ಕ್ರಮಕ್ಕೆ ನಮ್ಮಮ್ಮನೂ, ಇನ್ನಿಬ್ಬರೂ ಒಬ್ಬರಿಗಿನ್ನೊಬ್ಬರು ಸಹಾಯಕರಾದರು.

ಅದೇ ಕ್ರಮದಲ್ಲಿ ಸಮಯ ಉರುಳುತ್ತಿದ್ದಂತೆ ನಾನು ಹೈಸ್ಕೂಲ್ ಶಿಕ್ಷಣ ಪೂರೈಸಿ ಕಾಲೇಜಿಗೆ ಕಾಲಿಡುವ ಹಂತ ತಲುಪಿದೆ. ಹಾಸನ್ ಸಿಟಿಯ ಹೊರವಲಯದಲ್ಲಿದ್ದ ಎಸ್ ಎಲ್ ವಿ ತಾಂತ್ರಿಕ ವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗುವ ಅವಕಾಶ ನನಗೆ ಪ್ರಾಪ್ತವಾಯಿತು. ಅನಂತರ ನನಗೆ ಜೊತೆಯಾದ ಮಿತ್ರ ಶ್ಯಾಮಸುಂದರನೊಂದಿಗೆ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಮನೆ ಬಿಟ್ಟು, ಗದ್ದೆಹಳ್ಳ ಹಾಯುತ್ತ ನಡೆದು 4 ಕಿ. ಮೀ. ಸಾಗಿ ಶಿಕ್ಷಣಕೇಂದ್ರ ತಲುಪುವ ಪದ್ಧತಿಗೆ ನಾನು ಬದ್ಧನಾದೆ.

ನನ್ನ ತಾಂತ್ರಿಕ ಕಲಿಕೆ ಪೂರ್ಣವಾಗುವ ವೇಳೆಗೆ ನಮ್ಮಮ್ಮನಿಗೆ ಕರುಗುಂದ ಎಂಬ ಗ್ರಾಮಕ್ಕೆ ವರ್ಗವಾದ್ದರಿಂದ ನಾವು ಮನೆ ಬದಲಾಯಿಸಿ, ಕರುಗುಂದಕ್ಕಿಂತ ಉತ್ತಮ ಸ್ಥಾನವೆನಿಸಿದ್ದ ಹಾರನಹಳ್ಳಿ ಎಂಬಲ್ಲಿಗೆ ವಲಸೆ ಹೋಗುವಂತಾಯಿತು. ಜಾವಗಲ್ ರಸ್ತೆಯಲ್ಲಿದ್ದ ಕರುಗುಂದಕ್ಕೂ, ಹಾರನಹಳ್ಳಿಗೂ ಮಧ್ಯದ 4 ಕಿ. ಮೀ. ಹಾದಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಕಾಲ್ನಡಿಗೆ ಮೂಲಕವೂ, ಮಾರ್ನಿಂಗ್ ಕ್ಲಾಸ್ ಇದ್ದ ಶನಿವಾರದಂದು ಬಸ್ ಪ್ರಯಾಣದ ಮೂಲಕವೂ ಕ್ರಮಿಸುವ ಅಭ್ಯಾಸ ಬೆಳೆಸಿಕೊಂಡ ಅಮ್ಮ, ತಮ್ಮ ಶಾಲಾಶಿಕ್ಷಕಿ ಕರ್ತವ್ಯವನ್ನು ಕರಾರುವಾಕ್ಕಾಗಿ ನಿರ್ವಹಿಸಿದರು.

ಹಾರನಹಳ್ಳಿ ಓರ್ವ ಸಚಿವನನ್ನು (ಹಾರನಹಳ್ಳಿ ರಾಮಸ್ವಾಮಿ) ಕರ್ನಾಟಕ ಸರ್ಕಾರಕ್ಕೆ ನೀಡಿದ ಖ್ಯಾತಿಗೂ, ಜಾವಗಲ್ ಓರ್ವ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ (ಫಾಸ್ಟ್ ಬೌಲರ್ ಜಾವಗಲ್ ಶ್ರೀನಾಥ್)ನನ್ನು ಭಾರತಕ್ಕೆ ಒದಗಿಸಿದ ಹಿರಿಮೆಗೂ ಪಾತ್ರವಾಗಿವೆ.

Tuesday 27 February 2024

ಬದುಕಿನ ಹಾದಿ - 6

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಸ್ವೀಕೃತಿ, ಕಲಿಕೆ ಹಾಗೂ ಪ್ರಗತಿಯೇ ಬದುಕು; ಸೋತು, ಆನಂತರ ಎದ್ದು ಪರಿಸ್ಥಿತಿಯನ್ನು ನಿಭಾಯಿಸುವುದೇ ಬದುಕು.

ನಮ್ಮಪ್ಪ ಸತ್ತಾಗ ನಮ್ಮ ಪುಟ್ಟ ಕುಟುಂಬದಲ್ಲಿ ವಯೋಮಾನ ನಮ್ಮಮ್ಮನಿಗೆ 29 ವರ್ಷ, ನನಗೆ ಆರೂವರೆ ವರ್ಷ, ನನ್ನ ತಂಗಿಗೆ ಮೂರೂವರೆ ವರ್ಷ, ಹಾಗೂ ಕೈಕೂಸಾಗಿದ್ದ ನನ್ನ ತಮ್ಮನಿಗೆ ಕೇವಲ ಒಂದೂವರೆ ತಿಂಗಳು - ಇಂತಿತ್ತು. ನಮ್ಮಪ್ಪನ ಟೈಲರಿಂಗ್ ಷಾಪನ್ನು ಅಲ್ಲಿದ್ದ ದರ್ಜಿಗಳು, ಮತ್ತಿತರ ಕೆಲಸಗಾರರಿಗೆ ತಿಂಗಳು ತಿಂಗಳು ಸಂಬಳ ಕೊಡುತ್ತ ಮುಂದುವರಿಸಿಕೊಂಡು ಹೋಗುವ ಚೈತನ್ಯ ನಮ್ಮಲ್ಲಿ ಯಾರಿಗೂ ಇರಲಿಲ್ಲ. ನಮ್ಮಜ್ಜಿ (ನಮ್ಮಮ್ಮನ ಅಮ್ಮ) ಬಂದು, ಮಗಳನ್ನು ತಾನೇ ಮೈಸೂರಿಗೆ ಕರೆದುಕೊಂಡು ಹೋಗುವೆನೆಂದಾಗ 'ಸೊಸೆಯ ಮೇಲೆ ತಮ್ಮದೇ ಅಧಿಕಾರ' ಎಂದು ವಾದಿಸದೆ ನಮ್ಮಜ್ಜಿ (ನಮ್ಮಪ್ಪನ ಅಮ್ಮ) ಸೌಹಾರ್ದದಿಂದ ಬೀಳ್ಕೊಟ್ಟರು.

ಆಗಿನ ಕಾಲದಲ್ಲಿ ಗಂಡ ದುಡಿದು ತಂದು ಹಾಕಿದರೆ ಮಾತ್ರ ಹೆಂಡತಿ ನಿರ್ಭಯದಿಂದ ಮಾಡಿ ಹಾಕಬಹುದಾದಂಥ ಪರಿಸ್ಥಿತಿಯಿತ್ತು. ಈಗಿನ ಹಾಗೆ ಹೆಂಡತಿ 'ದುಡಿದು ತರುವುದು ನನ್ನ ಕೆಲಸ, ಅಚ್ಚುಕಟ್ಟಾಗಿ ಮಾಡಿ ಹಾಕುವ ಜವಾಬ್ದಾರಿಯನ್ನು ನೀನು ವಹಿಸಿಕೊ' ಎಂದು ದಬಾಯಿಸುವುದು ಕನಸಿನ ಮಾತಾಗಿತ್ತು. ನಮ್ಮಪ್ಪನಿಲ್ಲವಾದ ಬಳಿಕ ತನ್ನ ಆಲೋಚನೆಯ ಶಕ್ತಿಯನ್ನು ಮೀರಿ ನಮ್ಮಮ್ಮ ದುಡಿಯುವ ಧೈರ್ಯವನ್ನೂ, ಮಾಡಿ ಹಾಕುವ ಶ್ರಮವನ್ನೂ ಒಗ್ಗೂಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ಪರಿಸ್ಥಿತಿಯನ್ನು ಛಲದಿಂದ ಸ್ವೀಕರಿಸಲು ಮುಂದಾದ ನಮ್ಮಮ್ಮ, ಮೈಸೂರಿನ ಚಾಮುಂಡಿಪುರಂನಲ್ಲಿದ್ದ ಸೇಂಟ್ ಮೇರಿ ಶಾಲೆಗೆ ತೆರಳಿ, ಅಲ್ಲಿ ಮುಖ್ಯಸ್ಥೆಯಾಗಿದ್ದ ಸಿಸ್ಟರ್ ಸಿಸೀಲಿಯಾ ಅವರಲ್ಲಿ ಮನವಿ ಮಾಡಿಕೊಂಡರು. ಎಲ್ಲವನ್ನೂ ತಾಳ್ಮೆಯಿಂದ ಆಲಿಸಿದ ಸಿಸ್ಟರ್ ಸಿಸೀಲಿಯಾ, ಕನಿಷ್ಠ ವಿದ್ಯಾರ್ಹತೆ ಇದ್ದ ನಮ್ಮಮ್ಮನನ್ನು ಕುರಿತು 'ನಿನಗೆ ಸದ್ಯಕ್ಕೆ ನಮ್ಮ ಕಾನ್ವೆಂಟಿನ ಅಡುಗೆ ಮನೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತೇನೆ. ನೀನು ಪ್ರತಿದಿನ ಸಂಜೆ ಮನೆಗೆ ಹಿಂದಿರುಗಿದ ನಂತರ ಓದಿಕೊಂಡು ಪ್ರೈವೇಟಾಗಿ ಮೆಟ್ರಿಕ್ ಪರೀಕ್ಷೆಗೆ ದಾಖಲಾಗು. ಅನಂತರ ನಿನಗೆ ಓರ್ವ ಟೀಚರ್ ಕೆಲಸ ಕೊಡುತ್ತೇನೆ' ಎಂದರು. ಮೆಟ್ರಿಕ್ ಪರೀಕ್ಷೆ ದಾಖಲಾತಿ ಮುಖೇನ ಸಾರ್ವಜನಿಕ ಸೇವೆ ನಿರ್ವಹಿಸುವ ಅರ್ಹತೆ (EPS - Eligibility for Public Services) ಆ ದಿನಗಳಲ್ಲಿ ಪ್ರಾಪ್ತವಾಗುತ್ತಿತ್ತು. ಹಿಂಜರಿಯದೆ, ಸೇಂಟ್ ಮೇರಿ ಶಾಲೆಯ ಬಾಣಸಿಗ ವೃತ್ತಿ ಹಾಗೂ ಮೆಟ್ರಿಕ್ ಶಿಕ್ಷಣಭ್ಯಾಸವನ್ನು ಏಕಕಾಲದಲ್ಲಿ ನಮ್ಮಮ್ಮ ಆರಂಭಿಸಿದರು. 

ಹಾಸನ ಜಿಲ್ಲಾ ಗ್ರಾಮವೊಂದರಲ್ಲಿ ಸರ್ಕಾರಿ ವೈದ್ಯರಾಗಿದ್ದ ನಮ್ಮ ಮಾವ ಡಾ. ರಾಮರಾಜು (ನಮ್ಮಮ್ಮನ ಅಣ್ಣ) 'ಮೆಟ್ರಿಕ್ ಜೊತೆಗೆ ಹಿಂದಿ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಲು ಪ್ರಯತ್ನಿಸು. ನೇರವಾದ ಸರ್ಕಾರಿ ಹುದ್ದೆ ಪಡೆಯಲು ಅದರಿಂದ ಸಹಾಯವಾಗುತ್ತದೆ' ಎಂದು ಸೂಚಿಸಿದಾಗ ಅದನ್ನೂ ಮನೋಬಲದಿಂದ ಕೈಗೆತ್ತಿಕೊಂಡು ಸ್ವಲ್ಪ ಕಾಲದಲ್ಲಿಯೇ ಸ್ನಾತಕೋತ್ತರ ಪದವಿಗೆ ಸರಿಸಮಾನವಾದ 'ಹಿಂದಿ ರತ್ನ' ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತೇರ್ಗಡೆಯಾದರು. ಹಿಂದಿ ಶಿಕ್ಷಕರ ಅಭಾವವಿದ್ದ ನಿಮಿತ್ತ ಸರ್ಕಾರವು ತಡಮಾಡದೆ, ಅವರು ಹಾಸನ ಜಿಲ್ಲಾ ಗ್ರಾಮವೊಂದರ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕಿ ಹುದ್ದೆ ನಿರ್ವಹಿಸತಕ್ಕದ್ದು ಎಂಬ ಆಜ್ಞೆ ಹೊರಡಿಸಿತು.

ಆ ವೇಳೆಗೆ ಸೇಂಟ್ ಮೇರಿ ಶಾಲೆಯ ಶಿಕ್ಷಕಿ ಹುದ್ದೆ ನಿರ್ವಹಿಸಿ ವಿದ್ಯಾರ್ಥಿಗಳಿಗೆ ಅತ್ಯಂತ ಅಚ್ಚುಮೆಚ್ಚು ಎಂಬ ಹಿರಿಮೆ ಸಂಪಾದಿಸಿದ್ದ ನಮ್ಮಮ್ಮನನ್ನು ಸಿಸ್ಟರ್ ಸಿಸೀಲಿಯಾ ಬೀಳ್ಕೊಟ್ಟದ್ದು ಒಲ್ಲದ ಮನಸ್ಸಿನಿಂದಲೇ.

Sunday 25 February 2024

ಬದುಕಿನ ಹಾದಿ - 5

ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/

ಮೇಲ್ಕಂಡ ಉಕ್ತಿಯ ಭಾವಾರ್ಥ: ಮನ ಮೆಚ್ಚುವಂತಿರುವುದು ಮತ್ತು ಮನದಿಂದ ದೂರಾಗುವುದು ಮನುಷ್ಯನ ನಡವಳಿಕೆಯನ್ನು ಅವಲಂಬಿಸಿರುತ್ತದೆ.

ಸುಖದುಃಖಗಳಿಲ್ಲದೆ ಸಂಸಾರವಿಲ್ಲ. ಸುಖಾಂತದುಃಖಾಂತಗಳನ್ನು ಉಪದೇಶಿಸದ ಧರ್ಮಗ್ರಂಥಗಳಿಲ್ಲ. ಸುಖ ನೆಮ್ಮದಿಯನ್ನು ನೀಡುತ್ತದೆ, ದುಃಖವು ಪಾಠ ಕಲಿಸುತ್ತದೆ. ಪಾಠ ಕಲಿತು ಪ್ರಾಜ್ಞರಾದರೆ ನೆಮ್ಮದಿಯ ಬದುಕು ನಮ್ಮದಾಗುತ್ತದೆ.

ಧರ್ಮಗ್ರಂಥಗಳನ್ನು ಅರೆದು ಕುಡಿದಿದ್ದ ನಮ್ಮಜ್ಜ (ಅಪ್ಪನ ಅಪ್ಪ) ಬಾಹ್ಯ ಜಗತ್ತಿನಲ್ಲಿ ಪ್ರಕಾಂಡ ಪಂಡಿತನೆಂಬ ಹೊಗಳಿಕೆಗೆ ಪಾತ್ರರಾಗಿದ್ದರೂ, ಮನೆಯವರ ಮಟ್ಟಿಗೆ ಮೃತ್ಯುಸ್ವರೂಪಿಯಾಗಿದ್ದುದು ನಂಬಲಾರದ ಸತ್ಯ. ಅವರೊಂದಿಗೆ ಮನೆಯಲ್ಲಿದ್ದವರು ಪರಮ ಯಾತನೆಯಿಂದ ಬದುಕಲಾರದೆ ಬದುಕಿದರೆ, ಮನೆ ಬಿಟ್ಟು ಹೋದ (ದಶಕಗಳ ನಂತರ ಆತ ಇನ್ನಿಲ್ಲವೆಂಬುದನ್ನು ಖಚಿತಪಡಿಸಿಕೊಂಡೇ ಹಿಂದಿರುಗಿದ) ನಮ್ಮಪ್ಪ ಮತ್ತು ಚಿಕ್ಕಪ್ಪ ತಮ್ಮ ಹಣೆಯಲ್ಲಿ ಬರೆದಿದ್ದಂಥ ಬುದ್ಧಿ ಕಲಿತದ್ದು ಕೇವಲ ಅಲೆಮಾರಿಗಳಾಗಿಯೇ.

ಆಗ್ಗೆ ಊಟದ ಸಮಯದಲ್ಲಿ 'ನಾರಾಯಣಾಯ ನಮಃ' ಎಂದು ಉಚ್ಚರಿಸಿದ ನಂತರವೇ ಪ್ರತಿಯೊಂದು ತುತ್ತು ಆಹಾರವನ್ನು ಬಾಯಿಗೆ ಇರಿಸತಕ್ಕದ್ದು ಎಂಬ ನಿಯಮ ನಮ್ಮ ಕುಟುಂಬಕ್ಕೆ ಅನ್ವಯವಾಗುತ್ತಿತ್ತು. ಆ ನಿಯಮ ಮೀರಿದವರು ನಮ್ಮಜ್ಜನ ಕಠಿಣ ಶಿಕ್ಷೆಗೆ ಗುರಿಯಗುತ್ತಿದ್ದರು. ಸುಮಾರು ಹತ್ತು ವರ್ಷ ವಯಸ್ಸಾಗಿದ್ದ ನಮ್ಮಪ್ಪ ಒಂದು ದಿನ ಮರೆತು ಒಂದು ತುತ್ತನ್ನು ಬಾಯಿಗಿಟ್ಟ ತಕ್ಷಣ ಧಾವಿಸಿದ ನಮ್ಮಜ್ಜ ಬಲವಾಗಿ ಮುಖಕ್ಕೆ ಗುದ್ದಿದರಂತೆ. ಇನ್ನೂ ಧೃಡವಾಗಿರದ ಅವರ ಮೇಲೊಸಡಿನ ಎರಡು ಹಲ್ಲುಗಳು ಕಳಚಿಕೊಂಡು ಅವರ ಊಟದ ತಟ್ಟೆಯೊಳಕ್ಕೆ ಬಿದ್ದುವಂತೆ. 'ಇನ್ನೀ ದೌರ್ಜನ್ಯವನ್ನು ಎದುರಿಸಲಾರೆ' ಎಂದು ಆ ದಿನ ಮನೆ ಬಿಟ್ಟ ನಮ್ಮಪ್ಪ ಹಿಂದಿರುಗಿದ್ದು ನಮ್ಮಜ್ಜ ಮರಣಿಸಿದ ನಂತರವೇ. ಮುಂದೊಂದು ದಿನ ಅದೇ ಥರದ ಸನ್ನಿವೇಶ ಏರ್ಪಟ್ಟು ನಮ್ಮ ಚಿಕ್ಕಪ್ಪನೂ ಮನೆ ಬಿಟ್ಟು ಹೋಗುವುದು ಅನಿವಾರ್ಯವಾಯಿತಂತೆ.

ರೈಲ್ವೆ ಇಲಾಖೆಯ ಪ್ರಯಾಣಿಕರ ಟಿಕೆಟ್ ತಪಾಸಕ (TTE) ಹುದ್ದೆಯಿಂದ ನಿವೃತ್ತರಾಗುವ ಮುನ್ನ ಆ ಹುದ್ದೆಯನ್ನು ನಮ್ಮಪ್ಪನಾಗಲಿ, ಚಿಕ್ಕಪ್ಪನಾಗಲಿ ನಿರ್ವಹಿಸುತ್ತ ಮುಂದುವರಿಯಲು ಸಾಧ್ಯವಿದ್ದಂಥ ಸೌಲಭ್ಯವನ್ನು ಸಹಾ ಕೈಬಿಟ್ಟು ನಮ್ಮಜ್ಜ ತಮ್ಮ ನಿರ್ದಯ ಮನಸ್ಸಿನ ಒಂದು ಮಗ್ಗುಲನ್ನು ಪ್ರದರ್ಶಿಸಿದರು. ಅಲ್ಲದೆ, ನಿವೃತ್ತಿ ಸಮಯದ ಅಸುಪಾಸಿನಲ್ಲಿ ಪೂರ್ವಜರ ಆಸ್ತಿಯಾದ ಕಾಫಿ ತೋಟದ ಒಂದು ಪಾಲು ತಮಗೆ ದೊರೆತಾಗ ಅದನ್ನು ಮುಂದಿನ ಪೀಳಿಗೆಗೋಸ್ಕರ ಸಂರಕ್ಷಿಸದೆ ಮಾರಾಟ ಮಾಡಿ, ದೊರೆತ ಧನರಾಶಿಯನ್ನು ಕುದುರೆ ರೇಸುಗಳ ಮೇಲೆ ಹೂಡಿ ಹಾಳುಮಾಡಿದರು. ಅದೇ ಸಂದರ್ಭದಲ್ಲಿ (ಚಿಕ್ಕಮಗಳೂರು ಸಮೀಪದ ಚೀಕನಹಳ್ಳಿಯಲ್ಲಿರುವ 'ಕೋಗೋಡ್ ಎಸ್ಟೇಟ್' ಎಂಬ ಖ್ಯಾತನಾಮವುಳ್ಳ) ಆ ಕಾಫಿ ತೋಟದ ಇನ್ನೊಂದು ಪಾಲಿನ ಹಕ್ಕುದಾರನಾದ ನಮ್ಮ ಚಿಕ್ಕಜ್ಜ ಅದರ ಸದುಪಯೋಗಕ್ಕೆ ಮುಂದಾಗಿ, ಮೈಸೂರಿನ ಒಂಟಿಕೊಪ್ಪಲಿನಲ್ಲಿ 'ಕೋಗೋಡ್ ಹೌಸ್' ಎಂಬ ವಿಖ್ಯಾತ ಬಂಗಲೆಯೊಂದನ್ನು ನಿರ್ಮಿಸಿದರು. ಅಲ್ಲದೆ, ಬೆಂಗಳೂರಿನ ಪ್ರಪ್ರಥಮ 'ಸಿಟಿ ಮಾರ್ಕೆಟ್ ಸುರಂಗಮಾರ್ಗ' ನಿರ್ಮಿಸಿದ ಹೆಗ್ಗಳಿಕೆಯೂ ನಮ್ಮ ಚಿಕ್ಕಜ್ಜನ ಕುಟುಂಬಕ್ಕೆ ಸಲ್ಲುತ್ತದೆ.

ಬೇರೆಬೇರೆ ಸಂದರ್ಭಗಳಲ್ಲಿ ಮನೆ ಬಿಟ್ಟ ನಮ್ಮಪ್ಪ, ಚಿಕ್ಕಪ್ಪ ಬೇರೆಬೇರೆಯಾಗಿಯೇ ಗಲ್ಲಿಗಲ್ಲಿಗಳಲ್ಲಿ ಅಲೆಯುತ್ತ, ಎಲ್ಲೆಂದರಲ್ಲಿ ಉಂಡು ಮಲಗೇಳುತ್ತ ಅಂತಿಮವಾಗಿ ಕಲ್ಕತ್ತಾದ 'ದಾಸ್ ಫ್ಯಾಮಿಲಿ' ಆಶ್ರಯದಲ್ಲಿ ಪರಸ್ಪರ ಭೇಟಿಯಾಗಿ, ಟೈಲರಿಂಗ್ ಇತ್ಯಾದಿ ಕಸುಬುಗಳನ್ನು ತಮ್ಮದಾಗಿಸಿಕೊಂಡು, ಕನಿಷ್ಠ ಮೂರು ದಶಕಗಳ ತರುವಾಯ, ನಮ್ಮಜ್ಜ ಸತ್ತ ಸುದ್ದಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ಕಂಡ ನಂತರ ಮನೆಗೆ ಹಿಂದಿರುಗಿದರಂತೆ.

Friday 23 February 2024

ಬದುಕಿನ ಹಾದಿ - 4

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಯಾರನ್ನೂ ನಿಷ್ಪ್ರಯೋಜಕ ಎಂದು ಪರಿಗಣಿಸಬೇಡಿ. ಏಕೆಂದರೆ ಫಲ ನೀಡದ ಮರವೂ ಸಹ ನಮಗೆ ನೆರಳನ್ನು ನೀಡುವುದು ನಿಶ್ಚಿತ.

ಕಡೆಗಣಿಕೆ, ಅರ್ಥಾತ್ ತಾತ್ಸಾರದಿಂದ ಕಾಣುವ ಮುಖೇನ ಯಾವುದೇ ಸತ್ಪರಿಣಾಮವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಮ್ಮತ್ತೆಯೋರ್ವರು ತೀವ್ರವಾಗಿ ಕಡೆಗಣಿಸಲ್ಪಟ್ಟು ಚಿಕ್ಕ ವಯಸ್ಸಿನಲ್ಲೇ ಅಸು ನೀಗಿದರು. ತಾತ್ಸಾರಕ್ಕೆ ಗುರಿಯಾದ ನಮ್ಮಪ್ಪ ಮತ್ತು ಚಿಕ್ಕಪ್ಪ ವಿದ್ಯಾರ್ಥಿಗಳಾಗಿರಬೇಕಾದ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿ ಸಮಸ್ತ ಭಾರತದ ಬೀದಿಬೀದಿಗಳನ್ನು ಸುತ್ತುತ್ತ ಕಂಡಕಂಡ ಕಸುಬುಗಳನ್ನೆಸಗುತ್ತಾ ಕಾಲ ಕಳೆದರು.

ನಮ್ಮ ಕುಟುಂಬದಲ್ಲಿ ನಮ್ಮಪ್ಪ ಮತ್ತು ಚಿಕ್ಕಪ್ಪನ ನಡುವೆ ಇಂದಿರಾ ಮತ್ತು ಲೀಲಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದರಂತೆ. ಮದುವೆಯ ಮುನ್ನ ಅಡುಗೆ ಮತ್ತು ಮನೆ ಕೆಲಸವನ್ನು ಅವರಿಬ್ಬರೂ ಹಂಚಿಕೊಂಡು ಮಾಡುತ್ತಿದ್ದ ನಿಮಿತ್ತ, ಇಡೀ ಮನೆ ಒಂದಿಷ್ಟೂ ಧೂಳಿರದೆ ಕಣ್ಣುಗಳಿಗೆ ಹಬ್ಬವುಂಟುಮಾಡುವುದರ ಜೊತೆಗೆ ಮನೆಯವರೆಲ್ಲರಿಗೂ ಪ್ರತಿದಿನ ಸ್ವಾದಿಷ್ಟವಾದ ಮೃಷ್ಟಾನ್ನವನ್ನು ಸವಿಯುವ ಅವಕಾಶ ಪ್ರಾಪ್ತವಾಗುತ್ತಿತ್ತು.

ಆ ಬಾಲೆಯರ ಪೈಕಿ ಇಂದಿರಾ ಮದುವೆಯಾಗಿ, ಕಾವ್ಯವಾಚನಕ್ಕೆ ಹೆಸರುವಾಸಿಯಾಗಿದ್ದ ಕುಟುಂಬವೊಂದರ ಸೊಸೆಯಾಗಿ ತೆರಳಿದಳು. ಸಮಯ ಕಳೆದಂತೆ ಕಾರ್ಯತತ್ಪರ ಇಂದಿರಾಗೆ ಪತಿಗೃಹದಲ್ಲಿ ಎಡೆಬಿಡದೆ ಸಾಗುತ್ತಿದ್ದ ಗಮಕಾಭ್ಯಾಸದ ತರಂಗಗಳು ಚಿಟ್ಟು ಹಿಡಿಸತೊಡಗಿದವು. ಒಂದು ದಿನ ಮಧ್ಯಾಹ್ನ ಯಾರೂ ಮನೆಯಲ್ಲಿ ಇಲ್ಲದಿದ್ದಾಗ, ಗಮಕ ಕುರಿತು ಅವಳ ಮನದಲ್ಲೆದ್ದ ಕ್ರೋಧವು ಅಲ್ಲಿದ್ದ ಒಂದಷ್ಟು ಅಭ್ಯಾಸ ಪುಸ್ತಕಗಳ ಕಡೆಗೆ ಹರಿಹಾಯ್ದಿತು. ಇಂದಿರಾ ಅವುಗಳನ್ನೆತ್ತಿ ತಂದು ಮನೆಯ ಮುಂದೆ ಮೋರಿಯಲ್ಲಿ ರಭಸದಿಂದ ಹರಿಯುತ್ತಿದ್ದ ನೀರಿನೊಳಕ್ಕೆ ಸುರಿದಳು. ಕ್ಷಣಾರ್ಧದೊಳಗೆ ಆ ಪುಸ್ತಕಗಳು ಪ್ರವಾಹದಲ್ಲಿ ಮಾಯವಾದವು.

ನಂತರ ಮನೆಯವರು ವಿಚಾರಿಸಿದಾಗ ಎಲ್ಲವನ್ನೂ ಇದ್ದುದಿದ್ದಂತೆ ವಿವರಿಸಿದ ಇಂದಿರಾ, ಆವೇಶದ ಭರದಲ್ಲಿ ಹಾಗೆ ಮಾಡಿದೆನೆಂದಳು. ಆಗ ಮನೆಯವರಲ್ಲಿ ಸೊಸೆಯ ಮೇಲಿನ ಮಮಕಾರ ಮಾಯವಾಗಿ ಆ ಸ್ಥಾನವನ್ನು ತಾತ್ಸಾರ ಅವರಿಸಿತು. 'ಗಮಕ ನಿನಗೆ ಬೇಡವೆಂದರೆ ನೀನೂ ನಮಗೆ ಬೇಡ' ಎನ್ನುತ್ತಾ ಅವಳ ಗಂಡ ಮೊದಲುಗೊಂಡು ಮನೆಯವರೆಲ್ಲರೂ ಅವಳನ್ನು ಮನೆಯಿಂದಾಚೆಗೆ ದಬ್ಬಿದರು! ಅಜರಾಮರವೆಂದು ಹೊಗಳಿಸಿಕೊಳ್ಳುವ ಗಂಡ - ಹೆಂಡಿರ ಪ್ರೇಮ ಅಷ್ಟೊಂದು ಕ್ಷುಲ್ಲಕ ರೀತಿಯಲ್ಲಿ ಆ ಕುಟುಂಬದಲ್ಲಿ, ಭಾರತಕ್ಕೆ ಸ್ವತಂತ್ರ ಲಭಿಸಿದ ಹೊಚ್ಚಹೊಸತರಲ್ಲಿಯೇ ನುಚ್ಚುನೂರಾಗಿದ್ದು ಅನಿರೀಕ್ಷಿತ.

ರಸ್ತೆಗೆ ಬಂದು ಬಿದ್ದ ಇಂದಿರಾಳ ಮೇಲೆ ಅಪ್ಪಳಿಸಿದವು, ಮನೆಯಿಂದ ತೂರಲ್ಪಟ್ಟ ಅವಳ ಬಟ್ಟೆಬರೆಗಳು! ದಿಕ್ಕು ತೋಚದೆ ಅವಳು ಗಂಟೆಗಟ್ಟಲೆ ಅಲ್ಲಿಂದ ಕದಲಲಿಲ್ಲ, ಆದರೂ ಆ ನಿರ್ದಯಿ ಮನೆಯ ಬಾಗಿಲು ತೆರೆಯಲಿಲ್ಲ, ಆ ಮನೆಯೊಳಕ್ಕೆ ಮತ್ತೊಮ್ಮೆ ಕಾಲಿಡಲು ಅವಳಿಗೆ ಸಾಧ್ಯವಾಗಲಿಲ್ಲ. ಅಂದಿನ ನೀರೆಯರಿಗೆ, ಇಂದು ಹೆಣ್ಣುಮಕ್ಕಳಿಗೆ ಸ್ವತಂತ್ರವಾಗಿ ನೆಲೆಯೂರಲು ಲಭಿಸುತ್ತಿರುವಂಥ ಅವಕಾಶಗಳನ್ನು ಕನಸಿನಲ್ಲಿಯೂ ನೆನೆಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಕಣ್ಣೀರು ಹಾಕುತ್ತ ತವರಿಗೆ ಹಿಂದಿರುಗಿದ ಇಂದಿರಾಳ ಸಮ್ಮುಖದಲ್ಲಿ ಅವಳ ಅಪ್ಪನ ರೂಪದಲ್ಲಿದ್ದ ಬ್ರಹ್ಮರಾಕ್ಷಸ (ನಮ್ಮಜ್ಜ - ಅಪ್ಪನ ಅಪ್ಪ) ಪ್ರತ್ಯಕ್ಷನಾದ! ದುಃಖಾತಿರೇಕರೇಕದೊಂದಿಗೆ ಸ್ವಪುತ್ರಿಯಾದ ಇಂದಿರಾ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡ ಆ ಪಾಪಿ ಕಿಂಚಿತ್ತಾದರೂ ಮರುಕವಿಲ್ಲದೆ, 'ಕೊಟ್ಟ ಹೆಣ್ಣು ಕುಲಕ್ಕೆ ಹೊರಗು. ಆದ್ದರಿಂದ ನೀನು ಇಲ್ಲಿಂದ ತೊಲಗು' ಎಂದು ಅಬ್ಬರಿಸಿದ. ಆ ಅಯೋಗ್ಯನ ವರ್ತನೆ ಸಹ್ಯವಾಗದೆ, ಮಗಳ ಕಷ್ಟವನ್ನು ಕಣ್ತುಂಬಿಕೊಳ್ಳಲಾರದೆ ನಮ್ಮಜ್ಜಿ ಮಧ್ಯೆ ಪ್ರವೇಶಿಸಿದರು. ಅವರನ್ನೂ ಒದ್ದು ಮೂಲೆಗೆ ತಳ್ಳಿದ ನಮ್ಮಜ್ಜ. ದಬ್ಬಾಳಿಕೆ ಆ ದಿನಗಳಲ್ಲಿ ಅದಿನ್ನೆಷ್ಟು ಪ್ರಚಂಡವಾಗಿತ್ತು ಎಂಬುದನ್ನು ಊಹಿಸಿಕೊಳ್ಳಿ!

ನಮ್ಮಜ್ಜ ಯಾರ ಮಾತಿಗೂ ಜಗ್ಗದೆ, ಇಂದಿರಾಳನ್ನು ದೂರೀಕರಿಸಿಯೇ ಸಿದ್ದವೆಂಬ ವಿಕೃತ ಸಂಕಲ್ಪದಲ್ಲಿದ್ದ. ಆದರೆ ನಮ್ಮಜ್ಜಿಯ ಮನಸ್ಸು ತಡೆಯಲಿಲ್ಲ. ಸಮೀಪದಲ್ಲಿಯೇ ಒಂದು ಕೋಣೆಯನ್ನು ಬಾಡಿಗೆಗೆ ಗೊತ್ತುಮಾಡಿ ಮಗಳನ್ನು ಅದರಲ್ಲಿರಿಸಿದರು. ಉಪಹಾರ ಮತ್ತು ಊಟವನ್ನು ಅಜ್ಜನ ಕಣ್ಣು ತಪ್ಪಿಸಿ ತಂದು ಅವಳಿಗೆ ಊಡಿಸಿ, ಅವಳು ಬದುಕಿನ ಮೇಲೆ ಮತ್ತೆ ವಿಶ್ವಾಸ ಹೊಂದುವಂತೆ ಮಾಡಲು ಶತಪ್ರಯತ್ನ ನಡೆಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಇನ್ನಿಲ್ಲದಂತೆ ನಲುಗಿಹೋಗಿದ್ದ ಇಂದಿರಾ ಸಂಪೂರ್ಣವಾಗಿ ಅನ್ನ ನೀರು ತ್ಯಜಿಸಿದ್ದರಿಂದ, ಪ್ರಪಂಚವನ್ನೇ ಸರಿಯಾಗಿ ನೋಡಿರದ ತನ್ನ 20 - 21ರ ವಯೋಮಾನದಲ್ಲಿ, ಕೆಲವೇ ದಿನಗಳೊಳಗೆ ಇನ್ನಿಲ್ಲವಾದಳು.